Read Bible

Free to use • No login or registration required • For all ages

Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.

1 Samuel 13

1. ಸೌಲನು ಅರಸನಾದಾಗ ಮೂವತ್ತು ವರ್ಷ ಪ್ರಾಯದವನಾಗಿದ್ದನು. ಅವನು ಇಸ್ರಾಯೇಲರ ಮೇಲೆ ನಲವತ್ತೆರಡು ವರ್ಷಕಾಲ ಆಳಿದನು.

2. ಸೌಲನು ಇಸ್ರಾಯೇಲರೊಳಗಿಂದ ಮೂರು ಸಾವಿರ ಜನ ಪುರುಷರನ್ನು ಆಯ್ದುಕೊಂಡನು. ಅವರಲ್ಲಿ ಎರಡು ಸಾವಿರ ಜನರು ಅವನೊಂದಿಗೆ ಮಿಕ್ಮಾಷಿನಲ್ಲಿಯು, ಬೇತೇಲಿನ ದಿನ್ನೆ ಪ್ರದೇಶಗಳಲ್ಲಿಯು ಇದ್ದರು. ಒಂದು ಸಾವಿರ ಜನರು ಬೆನ್ಯಾಮೀನ್ಯರ ಗಿಬೆಯದಲ್ಲಿ ಯೋನಾತಾನನ ಜೊತೆಗಿದ್ದರು. ಉಳಿದ ಜನರನ್ನು ಅವನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.

3. ಯೋನಾತಾನನು ಗಿಬೆಯದಲ್ಲಿ ಫಿಲಿಷ್ಟಿಯರ ಠಾಣವನ್ನು ಹೊಡೆದನು; ಫಿಲಿಷ್ಟಿಯರಿಗೆ ಅದು ತಿಳಿದುಬಂತು. ಆದ್ದರಿಂದ ಸೌಲನು ದೇಶದಲ್ಲೆಲ್ಲಾ ಹಿಬ್ರಿಯರು ಕೇಳಲೆಂದು ತುತೂರಿಯನ್ನು ಊದಿಸಿದನು.

4. “ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ಸೌಲನು ನಾಶಮಾಡಿದ್ದರಿಂದ, ಇಸ್ರಾಯೇಲರು ಈಗ ಫಿಲಿಷ್ಟಿಯರಿಗೆ ಅಸಹ್ಯಕರ ಶತ್ರುವಾದರು,” ಎಂಬ ವರ್ತಮಾನವನ್ನು ಸಮಸ್ತ ಇಸ್ರಾಯೇಲರು ಕೇಳಿದರು. ಮತ್ತು ಗಿಲ್ಗಾಲಿಗೆ ಬಂದು ಸೌಲನನ್ನು ಸೇರಿಕೊಳ್ಳಲು ಜನರನ್ನು ಕರೆದರು.

5. ಆಗ ಇಸ್ರಾಯೇಲರ ಸಂಗಡ ಯುದ್ಧಮಾಡಲು ಫಿಲಿಷ್ಟಿಯರ ಮೂವತ್ತು ಸಾವಿರ ರಥಗಳೂ, ಆರು ಸಾವಿರ ಕುದುರೆ ಸವಾರರೂ, ಸಮುದ್ರತೀರದ ಮರಳಷ್ಟು ಜನರೂ ಕೂಡಿಕೊಂಡು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಇಳಿದುಕೊಂಡರು.

6. ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದದ್ದರಿಂದ ತಾವು ಇಕ್ಕಟ್ಟಿನಲ್ಲಿ ಇರುವುದನ್ನು ಕಂಡು, ಗವಿಗಳಲ್ಲಿಯೂ, ಮುಳ್ಳಿನ ಪೊದೆಗಳಲ್ಲಿಯೂ, ಗುಡ್ಡಗಳಲ್ಲಿಯೂ, ಕುಣಿಗಳಲ್ಲಿಯೂ ಬಾವಿಗಳಲ್ಲಿಯೂ ಅಡಗಿಕೊಂಡರು.

7. ಇದಲ್ಲದೆ ಹಿಬ್ರಿಯರಲ್ಲಿ ಕೆಲವರು ಯೊರ್ದನನ್ನು ದಾಟಿ, ಗಾದ್ ದೇಶಕ್ಕೂ, ಗಿಲ್ಯಾದಿಗೂ ಹೋದರು. ಆದರೆ ಸೌಲನು ಇನ್ನೂ ಗಿಲ್ಗಾಲಿನಲ್ಲಿದ್ದನು. ಜನರೆಲ್ಲರು ನಡುಗಿದವರಾಗಿ ಅವನನ್ನು ಹಿಂಬಾಲಿಸಿದರು.

8. ಸೌಲನು ತನಗೆ ಸಮುಯೇಲನು ನೇಮಿಸಿದ ಕಾಲದ ಪ್ರಕಾರ ಏಳು ದಿವಸ ಕಾದಿದ್ದನು. ಸಮುಯೇಲನು ಗಿಲ್ಗಾಲಿಗೆ ಬಾರದೆ ಇದ್ದುದರಿಂದ ಜನರು ಅವನನ್ನು ಬಿಟ್ಟು ಚದರಿಹೋದರು.

9. ಆಗ ಸೌಲನು, “ದಹನಬಲಿಯನ್ನೂ, ಸಮಾಧಾನದ ಬಲಿಗಳನ್ನೂ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ,” ಎಂದು ಹೇಳಿ ದಹನಬಲಿಯನ್ನು ಅರ್ಪಿಸಿದನು.

10. ಆದರೆ ಅವನು ದಹನಬಲಿಯನ್ನು ಅರ್ಪಿಸಿ, ತೀರಿಸುವಷ್ಟರೊಳಗೆ ಸಮುಯೇಲನು ಬಂದನು. ಆಗ ಅವನನ್ನು ವಂದಿಸುವುದಕ್ಕಾಗಿ ಸೌಲನು ಅವನನ್ನು ಎದುರುಗೊಳ್ಳಲು ಹೋದನು.

11. ಆದರೆ ಸಮುಯೇಲನು, “ನೀನೇನು ಮಾಡಿದಿ?” ಎಂದು ಸೌಲನನ್ನು ಕೇಳಿದನು. ಸೌಲನು, “ಸೈನಿಕರು ನನ್ನನ್ನು ಬಿಟ್ಟು ಹೋಗುತ್ತಿರುವುದನ್ನು, ನೀನು ನೇಮಿಸಿದ ದಿವಸಗಳ ಪ್ರಕಾರ ಬಾರದಿರುವುದನ್ನು ಮತ್ತು ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಕೂಡಿಕೊಂಡಿರುವುದನ್ನು ಕಂಡೆನು.

12. ಆಗ ನಾನು ನನ್ನಲ್ಲಿಯೇ ಯೋಚಿಸುತ್ತಾ, ‘ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ದಾಳಿಮಾಡುವುದು ಖಚಿತ ಮತ್ತು ನಾನು ಎಂದಿಗೂ ಯೆಹೋವ ದೇವರ ಸಹಾಯವನ್ನು ಕೇಳಲಿಲ್ಲ.’ ಆದ್ದರಿಂದ ನನ್ನಲ್ಲಿಯೇ ಆದ ಒತ್ತಡದಿಂದ ದಹನಬಲಿಯನ್ನು ಅರ್ಪಿಸಿದೆನು,” ಎಂದನು.

13. ಸಮುಯೇಲನು ಸೌಲನಿಗೆ, “ನೀನು ಬುದ್ಧಿಹೀನವಾದ ಕೆಲಸಮಾಡಿದ್ದೀ; ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಗೊಳ್ಳಲಿಲ್ಲ. ಯೆಹೋವ ದೇವರು ಇಸ್ರಾಯೇಲರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವುದಕ್ಕೆ ಇದ್ದರು.

14. ಆದರೆ ಈಗ ನಿನ್ನ ರಾಜ್ಯವು ನಿಲ್ಲಲಾರದು. ಯೆಹೋವ ದೇವರು ನಿನಗೆ ಆಜ್ಞಾಪಿಸಿದ್ದನ್ನು ನೀನು ಕೈಗೊಳ್ಳದೆ ಹೋದದ್ದರಿಂದ, ಅವರು ತಮ್ಮ ಹೃದಯಕ್ಕೆ ತಕ್ಕಂಥ ಒಬ್ಬ ಮನುಷ್ಯನನ್ನು ಹುಡುಕಿ, ಅವನನ್ನು ತಮ್ಮ ಜನರ ಮೇಲೆ ನಾಯಕನನ್ನಾಗಿ ನೇಮಿಸಿದ್ದಾರೆ,” ಎಂದನು.

15. ಸಮುಯೇಲನು ಎದ್ದು ಗಿಲ್ಗಾಲಿನಿಂದ ಬೆನ್ಯಾಮೀನ್ ದೇಶದ ಗಿಬೆಯಕ್ಕೆ ಹೋದನು. ಸೌಲನು ತನ್ನ ಸಂಗಡ ಇದ್ದ ಜನರನ್ನು ಲೆಕ್ಕಮಾಡಿದಾಗ, ಅವರು ಸುಮಾರು ಆರುನೂರು ಜನರಿದ್ದರು.

16. ಸೌಲನೂ, ಅವನ ಮಗ ಯೋನಾತಾನನೂ, ಅವನ ಸಂಗಡ ಇರುವ ಜನರೂ ಸಹಿತವಾಗಿ ಬೆನ್ಯಾಮೀನ್ಯರ ಗಿಬೆಯದಲ್ಲಿ ಇದ್ದರು. ಆದರೆ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಇಳಿದುಕೊಂಡಿದ್ದರು.

17. ಆಗ ಫಿಲಿಷ್ಟಿಯರ ಪಾಳೆಯದಿಂದ ಸುಲಿದುಕೊಳ್ಳುವವರು ಮೂರು ಗುಂಪಾಗಿ ಹೊರಟರು. ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್ ದೇಶದ ಕಡೆಗೆ ಹೋಯಿತು.

18. ಮತ್ತೊಂದು ಗುಂಪು ಬೇತ್ ಹೋರೋನಿನ ಮಾರ್ಗವಾಗಿ ಹೋಯಿತು. ಬೇರೊಂದು ಗುಂಪು ಮರುಭೂಮಿಗೆ ಎದುರಾಗಿರುವ ಜೆಬೋಯಿಮ್ ತಗ್ಗಿಗೆದುರಾದ ಮೇರೆಯ ಮಾರ್ಗವಾಗಿ ಹೋಯಿತು.

19. “ಹಿಬ್ರಿಯರು ತಮಗೆ ಖಡ್ಗವನ್ನಾದರೂ ಈಟಿಯನ್ನಾದರೂ ಮಾಡಿಕೊಳ್ಳಬಾರದು,” ಎಂದು ಫಿಲಿಷ್ಟಿಯರ ಆಜ್ಞೆಯಿದ್ದದರಿಂದ, ಆಗ ಇಸ್ರಾಯೇಲ್ ದೇಶದಲ್ಲಿ ಒಬ್ಬ ಕಮ್ಮಾರನಾದರೂ ಸಿಕ್ಕಲಿಲ್ಲ.

20. ಆದ್ದರಿಂದ ಇಸ್ರಾಯೇಲರೆಲ್ಲಾ ತಮ್ಮ ತಮ್ಮ ನೇಗಿಲಿನ ಗುಳಗಳನ್ನೂ, ಸಲಿಕೆಗಳನ್ನೂ, ಕೊಡಲಿಗಳನ್ನೂ, ಗುದ್ದಲಿಗಳನ್ನೂ ಮೊನೆ ಮಾಡುವುದಕ್ಕೆ ಫಿಲಿಷ್ಟಿಯರ ಬಳಿಗೆ ಹೋಗಬೇಕಾಗಿತ್ತು.

21. ಆದರೆ ಸಲಿಕೆ, ಗುದ್ದಲಿ, ಕುಂಟೆ, ಮುಳ್ಳುಗೋಲು, ಕೊಡಲಿ, ಅಂಕುಶ ಇವುಗಳನ್ನು ಹದಮಾಡುವುದಕ್ಕೆ ಅವರಲ್ಲಿ ಅರವು ಮಾತ್ರ ಇತ್ತು.

22. ಯುದ್ಧದ ದಿವಸದಲ್ಲಿ ಸೌಲ ಯೋನಾತಾನರ ಜೊತೆಯಲ್ಲಿದ್ದ ಸಮಸ್ತ ಜನರಲ್ಲಿ ಒಬ್ಬನ ಕೈಯಲ್ಲಾದರೂ ಖಡ್ಗವಾಗಲಿ, ಈಟಿಯಾಗಲಿ ಇರಲಿಲ್ಲ. ಆದರೆ ಸೌಲನಿಗೂ, ಅವನ ಪುತ್ರನಾದ ಯೋನಾತಾನನಿಗೂ ಮಾತ್ರವೇ ಇತ್ತು.

23. ಆಗ ಫಿಲಿಷ್ಟಿಯರ ದಂಡು ಮಿಕ್ಮಾಷಿನ ಕಣಿವೆಯ ಮಾರ್ಗದತ್ತ ಹೊರಟಿತು.