Read Bible

Free to use • No login or registration required • For all ages

Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.

1 Samuel 22

1. ದಾವೀದನು ಅಕೀಷ ರಾಜನಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಹೋದನು. ಈ ವರ್ತಮಾನವು ಅವನ ಅಣ್ಣಂದಿರಿಗೂ, ಬೇರೆ ಎಲ್ಲಾ ಸಂಬಂಧಿಕರಿಗೂ ಮುಟ್ಟಲಾಗಿ, ಅವರೂ ಬಂದು ಅವನನ್ನು ಸೇರಿಕೊಂಡರು.

2. ಇದಲ್ಲದೆ ಕುಗ್ಗಿದವರೂ, ಸಾಲಗಾರರೂ, ಮನನೊಂದವರೂ, ಆಗಿರುವ ಸರ್ವಜನರೂ ಬಂದು ಅವನನ್ನು ಆಶ್ರಯಿಸಿಕೊಳ್ಳಲು, ಅವನು ಸುಮಾರು ನಾನೂರು ಜನರಿಗೆ ನಾಯಕನಾದನು.

3. ಅನಂತರ ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ದೇಶದ ಮಿಚ್ಪೆ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿಯ ಅರಸನಿಗೆ, “ದೇವರು ನನಗೆ ಮಾರ್ಗತೋರಿಸುವವರೆಗೆ ನನ್ನ ತಂದೆತಾಯಿಗಳು ನಿನ್ನ ಬಳಿಯಲ್ಲಿರುವುದಕ್ಕೆ ಅಪ್ಪಣೆಯಾಗಬೇಕು” ಎಂದು ಬೇಡಿಕೊಂಡು, ಅವರನ್ನು ಅವನ ಬಳಿಯಲ್ಲಿ ಬಿಟ್ಟನು.

4. ದಾವೀದನು ದುರ್ಗದಲ್ಲಿದ್ದ ಕಾಲವೆಲ್ಲಾ ಅವನ ತಂದೆತಾಯಿಗಳು ಈ ಅರಸನ ಬಳಿಯಲ್ಲಿ ವಾಸವಾಗಿದ್ದರು.

5. ಗಾದ್ ಪ್ರವಾದಿಯು ದಾವೀದನಿಗೆ, “ನೀನು ಈ ದುರ್ಗದಲ್ಲಿರಬಾರದು, ಇದನ್ನು ಬಿಟ್ಟು ಯೆಹೂದ ದೇಶಕ್ಕೆ ಹೋಗು” ಎಂದು ಹೇಳಿದ್ದರಿಂದ ಅವನು ಹೆರೆತ್ ಅರಣ್ಯಕ್ಕೆ ಹೋದನು.

6. ಒಂದು ದಿನ ಸೌಲನು ತನ್ನ ಎಲ್ಲಾ ಪರಿವಾರದವರ ನಡುವೆ ಕೈಯಲ್ಲಿ ಬರ್ಜಿಯನ್ನು ಹಿಡಿದುಕೊಂಡು, ಗಿಬೆಯ ಗುಡ್ಡದ ಪಿಚುಲ ವೃಕ್ಷದ ಕೆಳಗೆ ಕುಳಿತುಕೊಂಡಿರಲು ದಾವೀದನೂ ಅವನ ಜನರೂ ಅಡಗಿಕೊಂಡಿರುವ ಸ್ಥಳವು ತಿಳಿದುಬಂದಿದೆ ಎಂಬ ಸುದ್ದಿಯು ಅವನಿಗೆ ಮುಟ್ಟಿತು.

7. ಆಗ ಅವನು ತನ್ನ ಸುತ್ತಲೂ ನಿಂತಿದ್ದ ಪರಿವಾರದವರಿಗೆ, “ಬೆನ್ಯಾಮೀನನ ಮಕ್ಕಳೇ ಕೇಳಿರಿ. ನೀವೆಲ್ಲರೂ ನನಗೆ ಒಳಸಂಚು ಮಾಡುವುದೇಕೆ? ಇಷಯನ ಮಗನು ನಿಮ್ಮೆಲ್ಲರಿಗೂ ಹೊಲಗಳನ್ನು, ದ್ರಾಕ್ಷಿತೋಟಗಳನ್ನು ಕೊಡುವನೋ? ಎಲ್ಲರನ್ನು ಸಹಸ್ರಾಧಿಪತಿಗಳನ್ನಾಗಲಿ, ಶತಾಧಿಪತಿಗಳನ್ನಾಗಲಿ ಮಾಡುವನೋ?

8. ನನ್ನ ಮಗನು ಇಷಯನ ಮಗನೊಡನೆ ಒಡಂಬಡಿಕೆ ಮಾಡಿಕೊಂಡದ್ದನ್ನು ನಿಮ್ಮಲ್ಲಿ ಒಬ್ಬನಾದರೂ ನನಗೆ ತಿಳಿಸಲಿಲ್ಲವಲ್ಲಾ. ನನ್ನ ಸೇವಕನು ನನಗೆ ವಿರೋಧವಾಗಿ ಒಳಸಂಚುಮಾಡುವ ಹಾಗೆ ನನ್ನ ಮಗನೇ, ಅವನನ್ನು ಎಬ್ಬಿಸಿದ್ದಾನೆಂಬುದನ್ನು ಒಬ್ಬನಾದರೂ ನನಗೆ ಯಾಕೆ ತಿಳಿಸಲಿಲ್ಲ? ನೀವು ನನ್ನ ಚಿಂತೆಯನ್ನೇ ಬಿಟ್ಟಿದ್ದೀರಿ” ಅಂದನು

9. ಆಗ ಸೌಲನ ಸೇವಕರ ಬಳಿಯಲ್ಲಿ ನಿಂತಿದ್ದ ಎದೋಮ್ಯನಾದ ದೋಯೇಗನು, “ಇಷಯನ ಮಗನು ನೋಬದಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ಕಂಡೆನು.

10. ಅವನು ಇವನಿಗೆ ಯೆಹೋವನ ಚಿತ್ತವನ್ನು ತಿಳಿಸಿ, ಆಹಾರವನ್ನೂ, ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನೂ ಕೊಟ್ಟನು” ಎಂದು ಹೇಳಿದನು.

11. ಕೂಡಲೆ ಸೌಲನು ಅಹೀಟೂಬನ ಮಗನೂ ಯಾಜಕನೂ ಆಗಿದ್ದ ಅಹೀಮೆಲೆಕನನ್ನೂ, ಅವನ ಕುಟುಂಬಕ್ಕೆ ಸೇರಿದ ನೋಬದ ಬೇರೆ ಎಲ್ಲಾ ಯಾಜಕರೊಡನೆ ಕರೆದುಕೊಂಡು ಬರುವಂತೆ ಕಳುಹಿಸಿದನು. ಅವರೆಲ್ಲರೂ ಅರಸನ ಸನ್ನಿಧಿಗೆ ಬರಲು,

12. ಸೌಲನು, “ಅಹೀಟೂಬನ ಮಗನೇ ಕೇಳು” ಅಂದನು. ಅದಕ್ಕೆ ಅವನು, “ಒಡೆಯಾ ಅಪ್ಪಣೆಯಾಗಲಿ” ಎಂದು ಉತ್ತರಕೊಟ್ಟನು.

13. ಆಗ ಸೌಲನು ಅವನಿಗೆ, “ನೀನು ನನಗೆ ವಿರೋಧವಾಗಿ ಇಷಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಕತ್ತಿಗಳನ್ನು ಕೊಟ್ಟು, ದೈವೋತ್ತರವನ್ನು ತಿಳಿಸಿದ್ದೇಕೆ?” ಎಂದು ಕೇಳಿದನು

14. ಅವನು, “ನಿನ್ನ ಎಲ್ಲಾ ಸೇವಕರಲ್ಲಿ ಅರಸನ ಅಳಿಯನಾಗಿರುವ ದಾವೀದನಂತೆ ನಂಬಿಗಸ್ತನಾದವನು ಯಾವನಿದ್ದಾನೆ? ಅವನು ನಿನ್ನ ಆಲೋಚಕರಲ್ಲೊಬ್ಬನು, ನಿನ್ನ ಮನೆಯಲ್ಲಿ ಗೌರವಸ್ಥನೂ ಆಗಿದ್ದನಲ್ಲವೇ?

15. ನಾನು ಅವನಿಗೋಸ್ಕರ ದೇವರ ಸನ್ನಿಧಿಯಲ್ಲಿ ವಿಚಾರಮಾಡಿದ್ದು ಇದೇ ಮೊದಲನೆಯ ಸಾರಿಯೋ? ಇದು ನನಗೆ ದೂರವಾಗಿರಲಿ. ಅರಸನು ತನ್ನ ಸೇವಕರ ಮೇಲೆ ಅವನ ಮನೆಯವರ ಮೇಲೆ ಇಂಥ ಮಾತನ್ನು ಹೊರಿಸಬಾರದು. ಈ ವಿಷಯದಲ್ಲಿ ನಿನ್ನ ಸೇವಕನಿಗೆ ಸ್ವಲ್ಪವೂ ಗೊತ್ತಿರಲಿಲ್ಲ” ಎಂದು ಉತ್ತರ ಕೊಟ್ಟನು.

16. ಆಗ ಅರಸನು ಅವನಿಗೆ, “ಅಹೀಮೆಲೆಕನೇ ನೀನೂ ನಿನ್ನ ಮನೆಯವರೂ ಸಾಯಲೇ ಬೇಕು” ಎಂದು ಹೇಳಿ ತನ್ನ ಬಳಿಯಲ್ಲಿದ್ದ

17. ಸಿಪಾಯಿಗಳಿಗೆ, “ನೀವು ಯೆಹೋವನ ಈ ಯಾಜಕರನ್ನು ಕೊಲ್ಲಿರಿ. ದಾವೀದನು ಓಡಿಹೋದದ್ದು ಗೊತ್ತಿದ್ದರೂ ನನಗೆ ತಿಳಿಸದೇ ಅವನಿಗೆ ಸಹಾಯ ಮಾಡಿದ್ದಾರೆ” ಎಂದು ಹೇಳಿ ಅವರನ್ನು ಕೊಲ್ಲಲು ಆಜ್ಞಾಪಿಸಿದನು. ಆದರೆ ಅರಸನ ಸಿಪಾಯಿಗಳು ಯಾಜಕರ ಮೇಲೆ ಕೈಹಾಕುವುದಕ್ಕೆ ಮನಸ್ಸು ಮಾಡಲಿಲ್ಲ.

18. ಆದ್ದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ, “ನೀನು ಹೋಗಿ ಅವರನ್ನು ಕೊಲ್ಲು” ಎಂದು ಆಜ್ಞಾಪಿಸಲು, ಅವನು ನಾರು ಬಟ್ಟೆಯ ಎಪೋದನ್ನು ಧರಿಸಿಕೊಂಡಿದ್ದ ಎಂಭತ್ತೈದು ಯಾಜಕರನ್ನು ಆ ದಿನ ಕೊಂದುಹಾಕಿದನು.

19. ಅನಂತರ ಅವನು ಯಾಜಕರ ಪಟ್ಟಣವಾದ ನೋಬಕ್ಕೆ ಹೋಗಿ ಅಲ್ಲಿನ ಸ್ತ್ರೀಪುರುಷರನ್ನೂ, ಶಿಶುಬಾಲಕರನ್ನೂ ದನ, ಕುರಿ, ಕತ್ತೆಗಳನ್ನು, ಕತ್ತಿಯಿಂದ ಸಂಹರಿಸಿದನು.

20. ಅಹೀಟೂಬನ ಮಗನಾದ ಅಹೀಮೆಲೆಕನ ಮಕ್ಕಳಲ್ಲೊಬ್ಬನಾದ ಎಬ್ಯಾತಾರನೆಂಬುವನು ತಪ್ಪಿಸಿಕೊಂಡು ದಾವೀದನ ಬಳಿಗೆ ಓಡಿಬಂದು,

21. ಸೌಲನು ಯೆಹೋವನ ಯಾಜಕರನ್ನು ಕೊಲ್ಲಿಸಿದ ಸಂಗತಿಯನ್ನು ಅವನಿಗೆ ತಿಳಿಸಿದನು.

22. ದಾವೀದನು ಎದೋಮ್ಯನಾದ ದೋಯೇಗನನ್ನು, “ನಾನು ಅಲ್ಲಿ ಕಂಡಾಗಲೇ ಇವನು ಸೌಲನಿಗೆ ಹೇಗೂ ಈ ಸಂಗತಿಯನ್ನು ತಿಳಿಸುವನೆಂದು ತಿಳಿದುಕೊಂಡೆನು. ನಿನ್ನ ಸಂಬಂಧಿಕರ ಸಾವಿಗೆ ನಾನೇ ಕಾರಣನಾದೆನಲ್ಲಾ.

23. ನೀನಾದರೋ ಹೆದರದೆ ನನ್ನ ಸಂಗಡ ಇರು. ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವನೇ ನಿನ್ನ ಪ್ರಾಣವನ್ನೂ ತೆಗೆಯಬೇಕೆಂದಿರುತ್ತಾನೆ. ನೀನು ನನ್ನ ಜೊತೆಯಲ್ಲಿರುವುದಾದರೆ ಸುರಕ್ಷಿತನಾಗಿರುವಿ” ಎಂದನು.