Read Bible
Free to use • No login or registration required • For all ages
Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.
1. ಆ ಆಳು ಮುಂದೆ ಹೋದಾಗ ಸಮುವೇಲನು ತೈಲದ ಕೊಂಬಿನಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು ಅವನನ್ನು ಮುದ್ದಿಟ್ಟು ಅವನಿಗೆ, “ಯೆಹೋವನು ತನ್ನ ಸ್ವತ್ತನ್ನು ಅಳುವುದಕ್ಕೋಸ್ಕರ ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ.
2. ಈ ಹೊತ್ತು ನೀನು ನನ್ನನ್ನು ಬಿಟ್ಟುಹೋದ ನಂತರ ಬೆನ್ಯಾಮೀನ್ಯರ ಮೇರೆಯೊಳಗಿರುವ ರಾಹೇಲಳ ಸಮಾಧಿಯ ಬಳಿಯಲ್ಲಿರುವಂಥ ಚೆಲ್ಚಹಿನಲ್ಲಿ ಇಬ್ಬರು ಮನುಷ್ಯರನ್ನು ಕಾಣುವಿ. ಅವರು ನಿನಗೆ, ‘ನೀನು ಹುಡುಕುತ್ತಿರುವ ಕತ್ತೆಗಳು ಸಿಕ್ಕಿದವು; ನಿನ್ನ ತಂದೆಯು ಕತ್ತೆಗಳ ಚಿಂತೆಬಿಟ್ಟು ನನ್ನ ಮಗನು ಎಲ್ಲಿ ಹೋದನು ಎಂಬುದಾಗಿ ನಿನಗೋಸ್ಕರ ಹಂಬಲಿಸುತ್ತಿರುತ್ತಾನೆ’ ಎಂದು ಹೇಳುವರು.
3. ನೀನು ಅಲ್ಲಿಂದ ಮುಂದೆ ನಡೆದು ತಾಬೋರಿನ ಹತ್ತಿರವಿರುವ ಏಲೋನ್ ವೃಕ್ಷದ ಬಳಿಗೆ ಬಂದಾಗ ದೇವದರ್ಶನಕ್ಕಾಗಿ ಬೇತೇಲಿಗೆ ಹೋಗುವ ಮೂವರು ಜನರು ನಿನ್ನನ್ನು ಎದುರುಗೊಳ್ಳುವರು. ಅವರಲ್ಲೊಬ್ಬನು ಮೂರು ಹೋತಮರಿಗಳನ್ನೂ, ಮತ್ತೊಬ್ಬನು ಮೂರು ರೊಟ್ಟಿಗಳನ್ನೂ, ಇನ್ನೊಬ್ಬನು ದ್ರಾಕ್ಷಾರಸದ ಒಂದು ಬುದ್ದಲಿಯನ್ನೂ ಹೊತ್ತುಕೊಂಡಿರುವರು.
4. ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ ಎರಡು ರೊಟ್ಟಿಗಳನ್ನು ನಿನಗೆ ಕೊಡುವರು; ನೀನು ಅವುಗಳನ್ನು ತೆಗೆದುಕೊಳ್ಳಬೇಕು.
5. ಅಲ್ಲಿಂದ ಫಿಲಿಷ್ಟಿಯರ ದಂಡು ಇರುವ ದೇವಗಿರಿಯನ್ನು ಮುಟ್ಟಿದಾಗ ಮುಂಭಾಗದಲ್ಲಿ ಸ್ವರಮಂಡಲ, ದಮ್ಮಡಿ, ಕೊಳಲು, ಕಿನ್ನರಿ ಈ ವಾದ್ಯಗಾರರೊಡನೆ ಗುಡ್ಡದಿಂದ ಇಳಿದು ಬರುತ್ತಿರುವ ಪ್ರವಾದಿಗಳ ಸಮೂಹವನ್ನು ಕಾಣುವಿ. ಅವರು ಪರವಶರಾಗಿ ಪ್ರವಾದಿಸುವರು.
6. ಆಗ ಯೆಹೋವನ ಆತ್ಮವು ನಿನ್ನ ಮೇಲೆಯೂ ಬರುವುದರಿಂದ ನೀನೂ ಅವರೊಂದಿಗೆ ಪ್ರವಾದಿಸುವಿ. ನೀನು ಮಾರ್ಪಟ್ಟ ಮನುಷ್ಯನಾಗುವಿ.
7. ಈ ಗುರುತುಗಳೆಲ್ಲಾ ಸಂಭವಿಸಿದಾಗ ನಿನಗೆ ಅನುಕೂಲವಿದ್ದ ಹಾಗೆ ಮಾಡು; ದೇವರು ನಿನ್ನ ಸಂಗಡ ಇದ್ದಾನೆ.
8. ನೀನು ಮುಂದಾಗಿ ಗಿಲ್ಗಾಲಿಗೆ ಹೋಗು; ಏಳು ದಿನಗಳಾದ ನಂತರ ನಾನು ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವುದಕ್ಕೋಸ್ಕರ ಅಲ್ಲಿಗೆ ಬಂದು ನೀನು ಮಾಡಬೇಕಾದದ್ದನ್ನು ನಿನಗೆ ತಿಳಿಸುವೆನು; ಅಲ್ಲಿಯ ವರೆಗೆ ಕಾದುಕೊಂಡಿರು” ಎಂದು ಹೇಳಿದನು.
9. ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಹೃದಯವನ್ನು ಕೊಟ್ಟನು. ಅದೇ ದಿನದಲ್ಲಿ ಆ ಎಲ್ಲಾ ಗುರುತುಗಳು ಸಂಭವಿಸಿದವು.
10. ಅವನು ದೇವಗಿರಿಗೆ ಬಂದ ಕೂಡಲೆ ಪರವಶವಾದ ಪ್ರವಾದಿಸಮೂಹವು ತನ್ನೆದುರಿಗೆ ಬರುವುದನ್ನು ಕಂಡನು. ದೇವರ ಆತ್ಮವು ಸೌಲನ ಮೇಲೆ ಬಂದ್ದದರಿಂದ ಅವನೂ ಪರವಶನಾಗಿ ಅವರೊಂದಿಗೆ ಸೇರಿ ಪ್ರವಾದಿಸಿದನು.
11. ಅವನು ಪರವಶನಾಗಿ ಮಾತನಾಡುವುದನ್ನು ಅವನ ಪರಿಚಿತರು ಕಂಡು ತಮ್ಮ ತಮ್ಮೊಳಗೆ, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನೋ?” ಎಂದು ಮಾತನಾಡಿಕೊಳ್ಳುತ್ತಿದ್ದರು.
12. ಆಗ ಆ ಸ್ಥಳದವನೊಬ್ಬನು, “ಹಾಗಾದರೆ ಇವರ ತಂದೆ ಯಾರು?” ಎಂದು ಕೇಳಿದನು. ಈ ಸಂಗತಿಯಿಂದ “ಸೌಲನು ಪ್ರವಾದಿಗಳಲ್ಲಿದ್ದಾನೆ” ಎಂಬ ವಿಷಯ ಹುಟ್ಟಿತು.
13. ಅವನು ಪ್ರವಾದಿಸಿದ ನಂತರ ಬೆಟ್ಟದ ಮೇಲಿದ್ದ ಯಜ್ಞವೇದಿಯ ಬಳಿಗೆ ಬಂದನು.
14. ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಲು ಅವನು, “ಕತ್ತೆಗಳನ್ನು ಹುಡುಕುವುದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲವಾದ್ದರಿಂದ ಸಮುವೇಲನ ಬಳಿಗೆ ಹೋದೆವು” ಅಂದನು.
15. “ಸಮುವೇಲನು ಏನು ಹೇಳಿದನು?” ಎಂದು ಚಿಕ್ಕಪ್ಪನು ಕೇಳಲು
16. ಸೌಲನು, “ಕತ್ತೆಗಳು ಸಿಕ್ಕಿವೇ ಎಂದು ತಿಳಿಸಿದನು” ಎಂಬುದಾಗಿ ಹೇಳಿದನೇ ಹೊರತು ಸಮುವೇಲನು ಹೇಳಿದ ರಾಜ್ಯಭಾರದ ಮಾತನ್ನು ತಿಳಿಸಲಿಲ್ಲ.
17. ಸಮುವೇಲನು ಇಸ್ರಾಯೇಲ್ಯರನ್ನು ಮಿಚ್ಪೆಗೆ ಕರೆಯಿಸಿ ಯೆಹೋವನ ಸನ್ನಿಧಿಯಲ್ಲಿ ಸೇರಿಸಿಕೊಂಡನು.
18. ಆತನು ಅವರಿಗೆ, ಇಸ್ರಾಯೇಲ್ ದೇವರಾದ ಯೆಹೋವನು ಹೇಳುವುದನ್ನು ಕೇಳಿರಿ, “ನೀವು ಐಗುಪ್ತರ ಕೈಗೆ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಅವರ ದೇಶದಿಂದ ಬಿಡಿಸಿದವನೂ, ಬಾಧಿಸುತ್ತಿದ್ದ ಬೇರೆ ಎಲ್ಲಾ ಜನಾಂಗಗಳಿಂದ ನಿಮ್ಮನ್ನು ರಕ್ಷಿಸಿದವನೂ ನಾನೇ.
19. ನೀವಾದರೋ ನಿಮ್ಮನ್ನು ಕಷ್ಟಸಂಕಟಗಳಿಂದ ಬಿಡಿಸಿದ ನಿಮ್ಮ ದೇವರಾದ ನನ್ನನ್ನು ಈಗ ತಿರಸ್ಕರಿಸಿ, ನಮಗೊಬ್ಬ ಅರಸನನ್ನು ನೇಮಿಸೆಂದು ಹೇಳುತ್ತೀರಿ ಅನ್ನುತ್ತಾನೆ. ಆದುದರಿಂದ ನೀವು ಕುಲ ಕುಲವಾಗಿಯೂ ಗೋತ್ರಗೋತ್ರವಾಗಿಯೂ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಿರಿ” ಎಂದು ಅಪ್ಪಣೆ ಮಾಡಿದನು.
20. ಸಮುವೇಲನು ಇಸ್ರಾಯೇಲ್ಯರ ಎಲ್ಲಾ ಕುಲಗಳನ್ನು ಸಮೀಪಕ್ಕೆ ಕರೆದಾಗ ಬೆನ್ಯಾಮೀನ್ ಕುಲಕ್ಕೆ ಚೀಟುಬಿದ್ದಿತು.
21. ಆ ಕುಲದ ಗೋತ್ರಗಳನ್ನು ಬರಮಾಡಿದಾಗ ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟುಬಿದ್ದಿತು. ಆದರೆ ಅವನನ್ನು ಹುಡುಕಲು ಅವನು ಸಿಕ್ಕಲಿಲ್ಲ.
22. ಅವರು, “ಆ ಮನುಷ್ಯನು ಇಲ್ಲಿಗೆ ಬರುವನೋ” ಎಂದು ಯೆಹೋವನನ್ನು ವಿಚಾರಿಸಿದಾಗ ಆತನು, “ಬಂದಿದ್ದಾನೆ; ಇಗೋ, ಸಾಮಾನುಗಳ ಮಧ್ಯದಲ್ಲಿ ಅಡಗಿಕೊಂಡಿದ್ದಾನೆ” ಎಂದು ಉತ್ತರಕೊಟ್ಟನು.
23. ಅವರು ತಟ್ಟನೆ ಹೋಗಿ ಅವನನ್ನು ಹಿಡಿದುಕೊಂಡು ಬಂದು ಜನರ ಮಧ್ಯದಲ್ಲಿ ನಿಲ್ಲಿಸಿದರು. ಗುಂಪಿನಲ್ಲಿದ್ದ ಎಲ್ಲಾ ಜನರಿಗಿಂತ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾದ ಪುರುಷನಾಗಿದ್ದನು.
24. ಆಗ ಸಮುವೇಲನು ಎಲ್ಲಾ ಜನರಿಗೆ, “ನೋಡಿದಿರಾ, ಯೆಹೋವನಿಂದ ಆರಿಸಲ್ಪಟ್ಟವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ” ಎನ್ನಲು ಜನರೆಲ್ಲರೂ, “ಅರಸನು ಚಿರಂಜೀವಿಯಾಗಿರಲಿ” ಎಂದು ಘೋಷಣೆಗಳನ್ನು ಕೂಗಿದರು.
25. ತರುವಾಯ ಸಮುವೇಲನು ಜನರಿಗೆ ರಾಜನೀತಿಯನ್ನು ಬೋಧಿಸಿ, ಅದನ್ನು ಒಂದು ಪುಸ್ತಕದಲ್ಲಿ ಬರೆದು, ಯೆಹೋವನ ಸನ್ನಿಧಿಯಲ್ಲಿಟ್ಟನು. ಆ ಮೇಲೆ ಜನರನ್ನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.
26. ಸೌಲನೂ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು; ಕೆಲವು ಮಂದಿ ಶೂರರು ದೇವರಿಂದ ಪ್ರೇರಿತರಾಗಿ ಅವನ ಜೊತೆಯಲ್ಲಿ ಹೋದರು.
27. ಕೆಲವು ಮಂದಿ ಅಯೋಗ್ಯರು, “ಇವನು ನಮ್ಮನ್ನು ರಕ್ಷಿಸುವನೋ?” ಎಂದು ತಿರಸ್ಕರಿಸಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.