Read Bible
Free to use • No login or registration required • For all ages
Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.
1. ಆಗ ಕಿರ್ಯತ್ಯಾರೀಮಿನವರು ಬಂದು ಯೆಹೋವನ ಮಂಜೂಷವನ್ನು ತೆಗೆದುಕೊಂಡು ಹೋಗಿ, ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಲ್ಲಿಟ್ಟು, ಅವನ ಮಗನಾದ ಎಲ್ಲಾಜಾರನನ್ನು ಅದರ ಸೇವೆಗೋಸ್ಕರ ಪ್ರತಿಷ್ಠಿಸಿದರು.
2. ಮಂಜೂಷವು ಕಿರ್ಯಾತ್ಯಾರೀಮಿಗೆ ಬಂದು ಬಹಳ ದಿನಗಳು ಅಂದರೆ, ಇಪ್ಪತ್ತು ವರ್ಷಗಳು ಕಳೆದು ಹೋದವು. ಈ ಕಾಲದಲ್ಲಿ ಎಲ್ಲಾ ಇಸ್ರಾಯೇಲ್ಯರು ದುಃಖಿಸುತ್ತಾ ಯೆಹೋವನ ಕಡೆಗೆ ತಿರುಗಿಕೊಳ್ಳಲು ಹಂಬಲಿಸುತ್ತಿದ್ದರು.
3. ಆಗ ಸಮುವೇಲನು ಅವರಿಗೆ, “ನೀವು ಪೂರ್ಣಮನಸ್ಸಿನಿಂದ ಯೆಹೋವನ ಕಡೆಗೆ ತಿರುಗಿಕೊಂಡಿರುವುದಾದರೆ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್ ಮೊದಲಾದ ಅನ್ಯದೇವತೆಗಳನ್ನು ತೆಗೆದುಹಾಕಿ ಯೆಹೋವನ ಮೇಲೆಯೇ ಮನಸ್ಸಿಟ್ಟು ಆತನೊಬ್ಬನನ್ನೇ ಸೇವಿಸಿರಿ. ಆಗ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು” ಅಂದನು.
4. ಹಾಗೆಯೇ ಇಸ್ರಾಯೇಲ್ಯರು ಬಾಳ್ ಅಷ್ಟೋರೆತ್ ದೇವತೆಗಳನ್ನು ತೆಗೆದುಹಾಕಿ ಯೆಹೋವನೊಬ್ಬನನ್ನೇ ಆರಾಧಿಸತೊಡಗಿದರು.
5. ಸಮುವೇಲನು ತಿರುಗಿ ಅವರಿಗೆ, “ಇಸ್ರಾಯೇಲ್ಯರೆಲ್ಲರೂ ಮಿಚ್ಪೆಯಲ್ಲಿ ಕೂಡಿಬರಲಿ; ನಾನು ನಿಮಗೋಸ್ಕರ ಯೆಹೋವನನ್ನು ಪ್ರಾರ್ಥಿಸುವೆನು” ಅಂದನು.
6. ಅವರು ಅಲ್ಲಿ ಕೂಡಿಬಂದು, ನೀರು ಸೇದಿ, ಯೆಹೋವನ ಮುಂದೆ ಹೊಯ್ದು, ಆ ದಿನ ಉಪವಾಸವಿದ್ದು, “ನಾವು ನಿನಗೆ ದ್ರೋಹಿಗಳಾಗಿದ್ದೇವೆ” ಎಂದು ಯೆಹೋವನಿಗೆ ಅರಿಕೆಮಾಡಿದರು. ಆನಂತರ ಸಮುವೇಲನು ನ್ಯಾಯಪಾಲಕನಾಗಿದ್ದು, ಮಿಚ್ಪೆಯಲ್ಲಿ ಇಸ್ರಾಯೇಲ್ಯರ ವ್ಯಾಜ್ಯಗಳನ್ನು ತೀರಿಸಿದನು.
7. ಇಸ್ರಾಯೇಲ್ಯರು ಮಿಚ್ಪೆಯಲ್ಲಿ ಕೂಡಿಬಂದಿದ್ದಾರೆ ಎಂದು ಫಿಲಿಷ್ಟಿಯರಿಗೆ ಗೊತ್ತಾದಾಗ ಅವರ ರಾಜರು ಇಸ್ರಾಯೇಲ್ಯರಿಗೆ ವಿರೋಧವಾಗಿ ಹೊರಟರು. ಇದನ್ನು ತಿಳಿದ ಇಸ್ರಾಯೇಲರು ಬಹಳವಾಗಿ ಭಯಪಟ್ಟು ಸಮುವೇಲನಿಗೆ,
8. “ನಮ್ಮ ದೇವರಾದ ಯೆಹೋವನು ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವ ಹಾಗೆ ನೀನು ನಮಗೋಸ್ಕರ ಆತನಿಗೆ ಮೊರೆಯಿಡು, ಸುಮ್ಮನಿರಬೇಡ” ಅಂದರು.
9. ಆಗ ಸಮುವೇಲನು ಹಾಲುಕುಡಿಯುವ ಕುರಿಮರಿಯನ್ನು ತಂದು ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಿ ಇಸ್ರಾಯೇಲ್ಯರಿಗೋಸ್ಕರ ಮೊರೆಯಿಡಲು ಆತನು ಸದುತ್ತರವನ್ನು ದಯಪಾಲಿಸಿದನು.
10. ಹೇಗೆಂದರೆ, ಸಮುವೇಲನು ಯಜ್ಞವನ್ನು ಅರ್ಪಿಸುವ ವೇಳೆಯಲ್ಲಿ ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಕ್ಕೋಸ್ಕರ ಸಮೀಪಿಸಲಾಗಿ, ಯೆಹೋವನು ದೊಡ್ಡ ಗುಡುಗಿನಿಂದ ಅವರನ್ನು ಕಳವಳಗೊಳಿಸಿ ಇಸ್ರಾಯೇಲರಿಗೆ ಸೋತು ಓಡಿ ಹೋಗುವಂತೆ ಮಾಡಿದನು.
11. ಇಸ್ರಾಯೇಲ್ಯರಾದರೋ ಮಿಚ್ಪೆಯಿಂದ ಹೊರಟು ಫಿಲಿಷ್ಟಿಯರನ್ನು ಹಿಂದಟ್ಟಿ ಬೇತ್ಕರಿನ ತಗ್ಗಿನವರೆಗೆ ಅವರನ್ನು ಹತಮಾಡಿದರು.
12. ಅನಂತರ ಸಮುವೇಲನು ಮಿಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ, “ಯೆಹೋವನು ಇಲ್ಲಿಯವರೆಗೆ ನಮಗೆ ಸಹಾಯಮಾಡಿದ್ದಾನೆ” ಎಂದು ಹೇಳಿ ಅದಕ್ಕೆ ಎಬೆನೆಜೆರ್ ಎಂದು ಹೆಸರಿಟ್ಟನು.
13. ಫಿಲಿಷ್ಟಿಯರು ಬಹಳವಾಗಿ ತಗ್ಗಿಸಲ್ಪಟ್ಟದರಿಂದ ತಿರುಗಿ ಇಸ್ರಾಯೇಲ್ಯರ ಪ್ರಾಂತ್ಯದೊಳಗೆ ಬರಲೇ ಇಲ್ಲ. ಸಮುವೇಲನ ಜೀವಮಾನದಲ್ಲೆಲ್ಲಾ ಯೆಹೋವನ ಹಸ್ತವು ಫಿಲಿಷ್ಟಿಯರಿಗೆ ವಿರೋಧವಾಗಿಯೇ ಇತ್ತು.
14. ಅವರು ಎಕ್ರೋನ್ ಮೊದಲುಗೊಂಡು ಗತ್ ಊರಿನ ವರೆಗೆ ಇಸ್ರಾಯೇಲರಿಂದ ಕಿತ್ತುಕೊಂಡಿದ್ದ ಎಲ್ಲಾ ಪಟ್ಟಣಗಳು ಇಸ್ರಾಯೇಲರಿಗೇ ದೊರಕಿದವು. ಅವುಗಳಿಗೆ ಸೇರಿದ ಗ್ರಾಮಗಳನ್ನೂ ಇಸ್ರಾಯೇಲರು ಫಿಲಿಷ್ಟಿಯರಿಂದ ತೆಗೆದುಕೊಂಡರು. ಇಸ್ರಾಯೇಲರಿಗೂ ಅಮೋರಿಯರಿಗೂ ಸಮಾಧಾನವಿತ್ತು.
15. ಸಮುವೇಲನು ಜೀವದಿಂದ ಇರುವವರೆಗೆ ಇಸ್ರಾಯೇಲರಿಗೆ ನ್ಯಾಯತೀರಿಸುತ್ತಿದ್ದನು.
16. ಅವನು ಇಸ್ರಾಯೇಲರ ನ್ಯಾಯಗಳನ್ನು ತೀರಿಸುವುದಕ್ಕೋಸ್ಕರ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್, ಮಿಚ್ಪೆ ಎಂಬ ಪಟ್ಟಣಗಳನ್ನು ಸುತ್ತಿ ರಾಮಕ್ಕೆ ತಿರುಗಿ ಬರುತ್ತಿದ್ದನು.
17. ಅಲ್ಲಿ ಅವನ ಸ್ವಂತ ಮನೆಯಿದ್ದುದರಿಂದ ಅಲ್ಲಿಯೇ ಯೆಹೋವನಿಗೆ ಒಂದು ಯಜ್ಞವೇದಿಯನ್ನು ಕಟ್ಟಿಸಿ ಇಸ್ರಾಯೇಲರ ವಿವಾದಗಳನ್ನು ತೀರಿಸುತ್ತಿದ್ದನು.